ಸುತ್ತಲೂ ಗಂಟೆಗಳ ರಾಶಿ, ಪ್ರಶಾಂತವಾದ ವಾತವಾರಣದಲ್ಲಿ ಪ್ರಕೃತಿಯ ಮಧ್ಯದಲ್ಲೇ ಪ್ರಥಮ ವಂದಿತನ ನೆಲೆ. ಗರ್ಭಗುಡಿಯ ಹಂಗಿಲ್ಲದೇ ಬಯಲಲ್ಲೇ ನೀಡುತ್ತಿದ್ದಾನೆ ಭಕ್ತರಿಗೆ ದರ್ಶನ

ಕೇಳಿಕೊಂಡ ಯಾವುದೇ ಇಷ್ಟಾರ್ಥಗಳಿಗೆ ಇಲ್ಲ ಎನ್ನದ ಗಣಪನಿಗೆ ಹರಕೆ ರೂಪದಲ್ಲಿ ಸಲ್ಲಿಕೆಯಾಗುತ್ತೆ ದಿನವೊಂದಕ್ಕೆ ನೂರಾರು ಗಂಟೆಗಳು

ಹೀಗೆ ಗಂಟೆಗಳ ನಿನಾದ, ಸಾವಿರಾರು ಭಕ್ತರ ಮೆಲು ದನಿಯ ಪ್ರಾರ್ಥನೆಗೆ ಸಾಕ್ಷಿಯಾಗುವ ಈ ಕ್ಷೇತ್ರವೇ ಇತಿಹಾಸ ಪ್ರಸಿದ್ಧ ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನ

ದಕ್ಷಿಣಕನ್ನಡ ಜಿಲ್ಲೆಯ ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ತೆರಳುವ ಕೊಕ್ಕಡ ಸಮೀಪದಲ್ಲೇ ಇರುವಂತಹ ಸೌತಡ್ಕ ಆಸ್ತಿಕರ ಶ್ರಧ್ಧಾ ಭಕ್ತಿ ಕೇಂದ್ರವಾಗಿದೆ. ಇಲ್ಲಿ ನೆಲೆಸಿರುವ ಮಹಾಗಣಪತಿ ದೇವರು ಭಕ್ತರಿಗೆ ಹತ್ತಿರದಿಂದಲೇ ದರ್ಶನ ಭಾಗ್ಯ ನೀಡುತ್ತಾನೆ

ತನ್ನೆದುರಲ್ಲಿ ನಿಂತು ತನ್ಮಯರಾಗಿ, ಭಕ್ತಿ ಭಾವದಿಂದ ಬೇಡಿಕೊಂಡವರನ್ನು ಎಲ್ಲಾ ಸಂಕಷ್ಟಗಳಿಂದ ದೂರ ಮಾಡುತ್ತಾನೆ. ಅಖಿಲಾಂಡ ಕೋಟಿಯ ಹೃದಯದಲ್ಲಿ ನೆಲೆಸಿರುವ ಮಹಾಗಣಪತಿ ನಂಬಿದವರ ಪಾಲಿನ ಆರಾಧ್ಯ ದೇವರಾಗಿದ್ದಾನೆ

ಎಲ್ಲಾ ಕ್ಷೇತ್ರಗಳಲ್ಲಿ ದೇವರಿಗೆ ಬೆಳ್ಳಿ, ಬಂಗಾರಗಳ ಹರಕೆಯನ್ನು ಸಮರ್ಪಿಸಿದರೆ, ಇಲ್ಲಿನ ಗಣೇಶನಿಗೆ ಗಂಟೆಯನ್ನಷ್ಟೇ ಹರಕೆ ರೂಪದಲ್ಲಿ ನೀಡಲಾಗುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿ ಗಂಟೆಗಳ ಹರಕೆ ವಿಶಿಷ್ಟ ಸೇವೆಯಾಗಿಯೂ ಗುರುತಿಸಲ್ಪಟ್ಟಿದೆ

ದಿನವೊಂದಕ್ಕೆ ಹೀಗೆ ನೂರಕ್ಕೂ ಅಧಿಕ ಗಂಟೆಗಳು ಶ್ರೀಕ್ಷೇತ್ರಕ್ಕೆ ಸಮರ್ಪಿತವಾಗುತ್ತದೆ. ಅತೀ ಸಣ್ಣ ಗಂಟೆಯಿಂದ ಆರಂಭಗೊಂಡು, ನೂರು ಕೆಜಿಯವರೆಗಿನ ದೊಡ್ಡ ದೊಡ್ಡ ಗಂಟೆಗಳೂ ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಹರಿದು ಬರುತ್ತದೆ

ಹೀಗೆ ಪ್ರತಿ ವರ್ಷ 11 ಟನ್ ಗಂಟೆಗಳು ಕ್ಷೇತ್ರಕ್ಕೆ ಬರುತ್ತಿವೆ ಅನ್ನೋದೆ ಈ ದೇವಸ್ಥಾನದ ಕಾರಣಿಕಕ್ಕೆ ಸಾಕ್ಷಿ ಎನ್ನುವಂತಿದೆ. ಇಲ್ಲಿರೋ ಗಣೇಶನು ಗೋವುಗಳನ್ನು ಮೇಯಿಸುತ್ತಿದ್ದನಂತೆ

ಈ ಗಣಪತಿಗೆ ಸೌತೆಯಿಂದಲೇ ನೈವೇಧ್ಯ ಸಲ್ಲಿಸುತ್ತಿದ್ರು, ಕ್ರಮೇಣ ಇದರಿಂದಲೇ ಇಲ್ಲಿಗೆ ಸೌತಡ್ಕ ಎಂಬ ಹೆಸರು ಬಂದಿದೆ ಅನ್ನೋ ಪ್ರತೀತಿ ಇದೆ

ಇನ್ನು ಈ ಗಣಪನಿಗೆ ಆಲಯವನ್ನು ನಿರ್ಮಾಣ ಮಾಡುದಾದ್ರೆ 24 ಗಂಟೆಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಕಾಣುವಷ್ಟು ಎತ್ತರದ ಆಲಯವನ್ನು ನಿರ್ಮಾಣ ಮಾಡಬೇಕಂತೆ. ಅದು ಅಸಾಧ್ಯದ ಮಾತು ಆಗಿದ್ದರಿಂದ, ಇಲ್ಲಿ ಬಯಲಲ್ಲೇ ಗಣಪತಿ ತನ್ನ ದರ್ಶನ ನೀಡುತ್ತಿದ್ದಾನೆ